ಪ್ರಜಾಪ್ರಭುತ್ವ ವ್ಯವಸ್ಥೆ ಎಂದರೆ ಪ್ರಜೆಗಳೆಲ್ಲರು ಒಮ್ಮತದ ಅಭಿಪ್ರಾಯದಿಂದ ಉತ್ತಮ ಭವಿಷ್ಯ ರೂಪಿಸಬಲ್ಲ ವ್ಯಕ್ತಿಯನ್ನು ಆಯ್ಕೆ ಮಾಡಿ ಅವನನ್ನು ಹಿಂಬಾಲಿಸುವುದು ಎಂದು ಅರ್ಥ. ಈ ಪ್ರಕ್ರಿಯೆ ಶಾಂತಿ ಸಮಾಧಾನದಿಂದ ನಡೆಯುತ್ತಿದ್ದರೆ, ಆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಗೆಲ್ಲುತ್ತಿದೆ ಎಂದು ಹೇಳಬಹುದು. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ಭಾರತ ದೇಶದಲ್ಲಿ ಶಾಂತಿಯಿಂದ ಜನಪ್ರತಿನಿಧಿಗಳ ಆಯ್ಕೆ ಆಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ಗೆಲ್ಲುತ್ತಿರುವುದಕ್ಕೆ ಕೈಗನ್ನಡಿಯಾಗಿದೆ.
ವಿಶ್ವದ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಪ್ರಜಾಪ್ರಭುತ್ವ ದೇಶ ನಮ್ಮದಾಗಿರುವುದಕ್ಕೆ ನಾವು ಹೆಮ್ಮೆ ಪಡಬೇಕಾಗಿದೆ. ಯಾವುದೇ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸುವುದು ಬಹು ಕಷ್ಟದ ಕೆಲಸ. ನಮ್ಮ ಅನೇಕ ಜನ ಪೂರ್ವಜರ ತ್ಯಾಗ ಬಲಿದಾನದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪಿತವಾಗಿದೆ. ಅದನ್ನು ಉಳಿಸಿ-ಬೆಳೆಸುವುದು ನಮ್ಮ ಜವಾಬ್ದಾರಿಯಾಗಿದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಮುಖ್ಯ ಬುನಾದಿಯಾದ ಚುನಾವಣೆ ಯಾವ ಆಧಾರದ ಮೇಲೆ ನಡೆಯುತ್ತದೆ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಭವಿಷ್ಯವನ್ನು ನಿರ್ಧರಿಸುತ್ತದೆ.
ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಒಂದು ಸಾವಿರ ಕೋಟಿಗಿಂದ ಅಧಿಕ ಹಣ ದುರ್ಬಳಕೆ ಆಗುವ ಸಾಧ್ಯತೆಯಿದೆ ಎಂದು ಅಂದಾಜಿಸಿರುವುದು ಖಂಡಿತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಇಂದಿನ ಈ ವ್ಯವಸ್ಥೆಗೆ ಕಡಿವಾಣ ಹಾಕದಿದ್ದರೆ, ಮುಂದೆ ಸಮಾಜದಲ್ಲಿ ಅಶಾಂತಿ ತಲೆದೋರಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಸೋಲುವ ಸಾಧ್ಯತೆಯಿದೆ. ಆಗ, ನಮ್ಮ ಪೂರ್ವಜರ ತ್ಯಾಗ ಬಲಿದಾನಕ್ಕೆ ಯಾವುದೇ ಅರ್ಥ ಇಲ್ಲದಂತೆ ಅಗುವುದು. ಇದರ ಕುರಿತು ಪ್ರಜ್ಞಾವಂತರು ಯೋಚಿಸುವ ಸಮಯ ಕೂಡಿ ಬಂದಿದೆ. ನಮ್ಮ ಇಂದಿನ ನಡೆಯಿಂದ ಪ್ರಕೃತಿಯ ಮೇಲಾಗುವ ಪರಿಣಾಮದ ಕುರಿತು ವಿಚಾರ ಮಾಡದೇ ನಡೆಯುವವರ ಸಂಖ್ಯೆ ಯಾವಾಗ ಹೆಚ್ಚಾಗುವುದೋ ಆಗ ಚುನಾವಣೆಗಳು ವಾಮಮಾರ್ಗದಿಂದ ನಡೆದು, ಮುಂದೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ನಾಶವಾಗುವಂತೆ ಆಗುವುದು.
ಇಂದು ಎಲ್ಲ ಜನರಿಗೂ ಪ್ರಕೃತಿಯ ಮಹತ್ವವನ್ನು ತಿಳಿಸಬೇಕಾಗಿದೆ. ಪ್ರಕೃತಿಯನ್ನು ಉಳಿಸಿ-ಬೆಳೆಸುವುದಕ್ಕೆ ಪೂರಕವಾದ ಯೋಜನೆಗಳನ್ನು ತರುವ ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ.
ಒಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟು ಸುದೀರ್ಘವಾಗಿ ಗೆಲ್ಲುತ್ತಾ ಸಾಗುವುದೋ ಅಷ್ಟು ಆ ದೇಶಕ್ಕೆ ವಿಶ್ವದಲ್ಲಿ ಮಹತ್ವ ಬರುವುದು. ಇಂದು ಜರುಗುತ್ತಿರುವ ಚುನಾವಣೆಗಳು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಂಡರೆ, ಖಂಡಿತವಾಗಿ ಭಾರತ ದೇಶ ಜಗತ್ತಿನ ಇತರ ದೇಶಗಳಿಗೆ ಮಾದರಿಯಾಗಿ ನಿಲ್ಲುವುದು. ದೇಶದ ಜನ ಎಷ್ಟು ಪ್ರಜ್ಞಾವಂತಿಕೆಯಿಂದ ಮತದಾನದಲ್ಲಿ ಭಾಗವಹಿಸುವರೋ ಅಷ್ಟು ಪ್ರಜಾಪ್ರಭುತ್ವ ವ್ಯವಸ್ಥೆ ಗೆಲ್ಲುವುದು.
ಜನರು ಪ್ರಜ್ಞಾವಂತಿಕೆಯಿಂದ ಚುನಾವಣೆಯಲ್ಲಿ ಭಾಗವಹಿಸಬೇಕಾದರೆ ಮುಂದಿನ ದಿನಗಳಲ್ಲಿ ಭೂಮಿಯ ಮೇಲಿನ ಎಲ್ಲ ಜನರೂ ಎದುರಿಸಬೇಕಾದ ಸಮಸ್ಯೆಯ ಕುರಿತು ಜಾಗೃತಿ ಮೂಡಿಸುವ ಅನಿವಾರ್ಯತೆಯಿದೆ. ಕೇವಲ ವೈಯಕ್ತಿಕ ಸಮಸ್ಯೆಗೆ ಗಮನ ಹರಿಸದೇ ದೇಶದ ಸಮಸ್ಯೆಗೆ ಗಮನ ಹರಿಸುವಂತೆ ಜನರನ್ನು ತಯಾರಿ ಮಾಡುವ ಯೋಜನೆ ರೂಪಿಸಬೇಕಾಗಿದೆ. ಈ ರೀತಿಯ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸೂಕ್ತ ಸಮಯವೇ ಚುನಾವಣೆಯ ಸಮಯ. ನಾವು ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೆಲ್ಲಿಸಿದರೆ, ಮುಂದೆ ನಮ್ಮ ಮಕ್ಕಳು ಬದುಕು ಕಟ್ಟಿಕೊಳ್ಳಲು ಸುಂದರ ವಾತಾವರಣವನ್ನು ನಿರ್ಮಿಸಲು ಇಂದೇ ನಾವು ಹೆಜ್ಜೆ ಇಟ್ಟಂತೆ ಅಗುವುದು. ಇದುವೇ ಪ್ರಕೃತಿ ಪ್ರೇಮಿಗಳಾದ ಲಿಂಗೈಕ್ಯ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳಿಗೆ ಸಲ್ಲಿಸುವ ನಡೆ ನಮನವಾಗಿದೆ...ಯೋಚಿಸಿ!
...........................................
ಚುನಾವಣೆ ಸಂದರ್ಭದಲ್ಲಿ ಪ್ರಕೃತಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮಕ್ಕಳಿಗಾಗಿ ಯುಟುಬ್ ಮುಖಾಂತರ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. *ಓದುಗರು ಹತ್ತು ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಜನರಿಗೆ ಅರಿವು ಮೂಡಿಸುವ ಜವಾಬ್ದಾರಿ ಹೊರಬಹುದೇ?* ವಿಜೇತರಿಗೆ ತೃತಿಯ ಬಹುಮಾನವೇ 25 ಸಾವಿರ ರೂಪಾಯಿ ಇರುವುದು.
ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://missionsavesoil.blogspot.com/2023/03/blog-post_12.html.
...........................................
🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.